ಬದ್ರಿನಾಥ್ ಸಮೀಪ ಭಾರೀ ಹಿಮಪಾತ: 41 ಕಾರ್ಮಿಕರು ನಾಪತ್ತೆ, 16 ಮಂದಿಯನ್ನು ರಕ್ಷಿಸಲಾಗಿದೆ.
ಬದ್ರಿನಾಥ್ ದೇವಾಲಯದಿಂದ ಸುಮಾರು ಐದು ಕಿಲೋಮೀಟರ್ ದೂರದ ಮಣಾ ಗಡಿಯ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.
ಚಮೋಳಿ:
ಉತ್ತರಾಖಂಡದ ಚಮೋಳಿ ಜಿಲ್ಲೆಯಲ್ಲಿ ಭಾರೀ ಹಿಮಪಾತ ಸಂಭವಿಸಿದ್ದು, ಕನಿಷ್ಠ 41 ಗಡಿ ರಸ್ತೆ ಸಂಸ್ಥೆ (BRO) ಕಾರ್ಮಿಕರು ಅದರಲ್ಲಿ ಸಿಕ್ಕು ಹಾಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ದುರ್ಘಟನೆ ಬದ್ರಿನಾಥ್ ದೇವಾಲಯದಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿರುವ ಗಡಿಯ ಮಣಾ ಗ್ರಾಮದ ಬಳಿ ನಡೆದಿದೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಒಟ್ಟು 57 ಕಾರ್ಮಿಕರಲ್ಲಿ 16 ಮಂದಿಯನ್ನು ಈಗಾಗಲೇ ರಕ್ಷಿಸಲಾಗಿದ್ದು, ಗಂಭೀರ ಸ್ಥಿತಿಯಲ್ಲಿ ಅವರನ್ನು ಮಣಾ ಗ್ರಾಮ ಸಮೀಪದ ಸೇನಾ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ .
ಸುಮಾರು 60-65 ಜನರು ರಕ್ಷಣಾ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಉತ್ತರಾಖಂಡದ ಪೊಲೀಸ್ ಮಹಾನಿರ್ದೇಶಕ ದೀಪಂ ಸೇಠ್ NDTV ಗೆ ನೀಡಿದ ಮಾಹಿತಿಯ ಪ್ರಕಾರ, ಘಟನೆ ಸಂಭವಿಸಿದಾಗ BRO ಶಿಬಿರದಲ್ಲಿ 57 ರಸ್ತೆ ನಿರ್ಮಾಣ ಕಾರ್ಮಿಕರು ನಿಯೋಜಿತರಾಗಿದ್ದರು.
"ರಕ್ಷಣಾ ಕಾರ್ಯಾಚರಣೆ ಕಳೆದ ಎರಡು ಗಂಟೆಗಳಿನಿಂದ ನಿರಂತರವಾಗಿ ಮುಂದುವರಿದಿದೆ. ಪ್ರಮುಖ ಅಡಚಣೆಗೆ ಕೆಟ್ಟ ಹವಾಮಾನವಾಗಿದ್ದು, ಭಾರೀ ಗಾಳಿಯೊಂದಿಗೆ ಹಿಮಪಾತ ಮುಂದುವರೆದಿದೆ... ಇದರಿಂದಾಗಿ ರಸ್ತೆಗಳು ಸಂಪೂರ್ಣವಾಗಿ ಮುಚ್ಚಿಕೊಂಡಿವೆ. ನಾವು ಹಿಮ ಕತ್ತರಿಸುವ ಯಂತ್ರಗಳನ್ನು ಬಳಸಿಕೊಂಡು ರಸ್ತೆ ತೆರೆಯುವ ಕಾರ್ಯ ನಡೆಸುತ್ತಿದ್ದೇವೆ," ಎಂದು ಸೆಠ್ ತಿಳಿಸಿದರು.
"ಮೂರರಿಂದ ನಾಲ್ಕು ಆಂಬುಲೆನ್ಸ್ಗಳನ್ನು ಕೂಡ ಸ್ಥಳಕ್ಕೆ ಕಳುಹಿಸಲಾಗಿದೆ. ಆದರೆ ನಿರಂತರ ಹಿಮಪಾತದ ಕಾರಣದಿಂದ ರಕ್ಷಣಾ ತಂಡವು ಸ್ಥಳವನ್ನು ತಲುಪಲು ಕಷ್ಟಪಡುತ್ತಿದೆ," ಎಂದು ಗಡಿ ರಸ್ತೆ ಸಂಸ್ಥೆಯ (BRO) ಕಾರ್ಯನಿರ್ವಾಹಕ ಇಂಜಿನಿಯರ್ CR ಮೀನಾ ANI ಸುದ್ದಿಸಂಸ್ಥೆಗೆ ಹೇಳಿದರು.
"ನಿರಂತರವಾಗಿ ಹಿಮಪಾತ ಮತ್ತು ಮಳೆ ಮುಂದುವರಿಯುತ್ತಿದ್ದು, ಹೆಲಿಕಾಪ್ಟರ್ ಸೇವೆಗಳನ್ನು ನಿಯೋಜಿಸುವಲ್ಲಿ ಅಡಚಣೆಯಾಗುತ್ತಿದೆ. ಸಂಚಾರವೂ ತುಂಬಾ ಕಷ್ಟವಾಗಿದೆ," ಎಂದು ಚಮೋಳಿ ಜಿಲ್ಲಾಧಿಕಾರಿ ಸಂದೀಪ್ ತಿವಾರಿ ಮಾಹಿತಿ ನೀಡಿದರು.
ಜೋಶಿಮಠದಿಂದ ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆ (SDRF) ತಂಡ ಪರಿಹಾರ ಕಾರ್ಯಚರಣೆಗೆ ತೆರಳಿದ್ದು,ಪ್ರಾಕೃತಿಕ ವಿಪತ್ತು ಸ್ಥಳದತ್ತ ಸಾಗುತ್ತಿದೆ. ಲಂಬಗಡದಲ್ಲಿ ಹಿಮಪಾತದಿಂದ ರಸ್ತೆ ಮುಚ್ಚಿ ಹೋಗಿರುವ ಕಾರಣ, ಅದನ್ನು ತೆರವುಗೊಳಿಸಲು ಸೇನೆಗೆ ಸಹಾಯಕ್ಕಾಗಿ ಮನವಿ ಮಾಡಲಾಗಿದೆ. ಸಹಸ್ರಧಾರಾ ಹೆಲಿಪ್ಯಾಡ್ನಲ್ಲಿ SDRF ನ ಇನ್ನೊಂದು ತಂಡ ಸಜ್ಜಾಗಿದೆ. ಹವಾಮಾನದಲ್ಲಿ ಸುಧಾರಣೆ ಕಂಡ ತಕ್ಷಣ, SDRF ನ ಎತ್ತರ ಪ್ರದೇಶ ರಕ್ಷಣಾ ತಂಡವನ್ನು ಹೆಲಿಕಾಪ್ಟರ್ ಮೂಲಕ ಹತ್ತಿರದ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು.
"SDRF ಡ್ರೋನ್ ತಂಡವೂ ಕಾರ್ಯಾಚರಣೆಗೆ ಸಿದ್ಧವಾಗಿದೆ. ಆದರೆ ಭಾರೀ ಹಿಮಪಾತದ ಕಾರಣದಿಂದ ಈ ಸಮಯದಲ್ಲಿ ಡ್ರೋನ್ ಕಾರ್ಯಾಚರಣೆ ಸಾಧ್ಯವಾಗುತ್ತಿಲ್ಲ," ಎಂದು SDRF ನ ಪೊಲೀಸ್ ಮಹಾನಿರೀಕ್ಷಕ ರಿಧಿಮ್ ಅಗರ್ವಾಲ್ ತಿಳಿಸಿದರು.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಈ ಘಟನೆಯನ್ನು ದುಃಖಕರವೆಂದು ಪರಿಗಣಿಸಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ಗತಿ ಪಡೆದುಕೊಂಡಿವೆ ಎಂದು ಭರವಸೆ ನೀಡಿದ್ದಾರೆ. ರಾಜ್ಯ ವಿಪತ್ತು ನಿಯಂತ್ರಣ ಕೇಂದ್ರದಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ರಕ್ಷಣಾ ಕಾರ್ಯಾಚರಣೆಯ ಪ್ರಗತಿಯನ್ನು ಪರಿಶೀಲಿಸಿದ್ದಾರೆ.
"ನಾನು ಎಲ್ಲಾ ಕಾರ್ಮಿಕ ಸಹೋದರರ ಸುರಕ್ಷತಿಗಾಗಿ ಭಗವಂತ ಬದ್ರಿಯನ್ನು ಪ್ರಾರ್ಥಿಸುತ್ತೇನೆ," ಎಂದು ಅವರು X (ಹಳೆಯ ಟ್ವಿಟರ್) ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ (IMD) ಭಾರೀ ಮಳೆಯಿಂದ ಕೆಳಭಾಗದ ಪ್ರದೇಶಗಳಲ್ಲಿ ನೀರು ತುಂಬುವುದು, ಸ್ಥಳೀಯವಾಗಿ ಪ್ರವಾಹ ಉಂಟಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.
ಇದೆಲ್ಲದರೊಂದಿಗೆ, ಕಡಿಮೆ ದೃಶ್ಯಮಾನತೆ, ವಾಹನ ಸಂಚಾರದಲ್ಲಿ ಅಡಚಣೆ, ಪ್ರಯಾಣ ಸಮಯದ ವಿಳಂಬ ಮತ್ತು ಕಚ್ಚಾ ರಸ್ತೆಗಳ ಲಘು ಹಾನಿ ಸಂಭವಿಸುವ ಸಾಧ್ಯತೆ ಇದೆ ಎಂದು IMD ಎಚ್ಚರಿಸಿದೆ.
0 Comments